Monday, April 27, 2009

ಕ್ಷಣಿಕ ಜೀವನ


ಅಣಬೆಯನ್ನು ಕುರಿತು ಒಂದು ಸರಣಿ ಚಿತ್ರಗಳಿವೆ
ಅದರಲ್ಲಿ ಇದು ಒಂದು.
ಕ್ಷಣಿಕ ಜೀವನದ ಸಂಕೇತವಾಗಿ ಅಣಬೆಯನ್ನು ಆಯ್ದು ಕೃತಿ ಮಾಡಿದ್ದು.

Sunday, April 19, 2009

ಮದ್ಯೆ ಒಂದು ಸೀಮೆಎಣ್ಣೆ ದೀಪ.


ಚಿತ್ರದಲ್ಲಿರುವ ಶಿಲ್ಪವನ್ನು ಗಮನಿಸಿ ಇಲ್ಲಿ ಹೊರಗೆ ಕಣಿಸುವ ದೀಪದಂತೆ ಒಳಗೊಂದಿದೆ.
ಜಗಮಗಿಸುವ ವಿದ್ಯುತ್ ದೀಪದ ಮದ್ಯೆ ಒಂದು ಸೀಮೆಎಣ್ಣೆ ದೀಪ.
ಪಾಪ.
ನನ್ನ ಬಾಲ್ಯದ ನೆನಪು ಈ ಕೃತಿಗೆ ಪ್ರೇರಣೆ.
ಮಾದ್ಯಮಗಳು ಬದಲಾದರೂ ಪರಿಣಾಮ ಬದಲಾಗುವುದೇ?
ಗೋತ್ತಿಲ್ಲ ಮುಂದೆ ಅದನ್ನೇ ವಿಷಯವಾಗಿಟ್ಟು ಕೃತಿ ಮಾಡುವಾ...

Friday, April 17, 2009

ಅಕ್ಷರ ಚಿತ್ರ


ಪ್ರಾಚೀನ ಭಾರತೀಯರು ಸಾಮಾಜಿಕ ಸ್ವಾಸ್ಥ್ಯಕ್ಕೆ ವೈಯಕ್ತಿಕ ಸಂಸ್ಕೃತಿ ಮುಖ್ಯ ಸಾಧನ ಎಂದು ತಿಳಿದಿದ್ದರು. ಸುಸಂಸ್ಕೃತವೂ, ಕಲಾತ್ಮಕವೂ ಆದ ಜೀವನ ಕೇವಲ ಸಾಮಾಜಿಕ ವ್ಯವಸ್ಥೆಯ ಅಂಗವಾಗಿರಲಿಲ್ಲ ಅದು ಅಧ್ಯಾತ್ಮ ಸಾಧನೆಯ ಮಾರ್ಗವೂ ಆಗಿತ್ತು. ನಮ್ಮ ಹಿರಿಯರು ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ ಅವಶ್ಯವೆನಿಸಿದ ವಿದ್ಯೆಗಳನ್ನೆಲ್ಲ ೩೨ ಶಾಸ್ತ್ರಗಳಲ್ಲಿ, ೬೪ಕಲೆಗಳಲ್ಲಿ ವಿಂಗಡಿಸಿದರು. ಶಾಸ್ತ್ರಗಳಲ್ಲಿ ೪ವೇದ ೪ ಉಪವೇದಗಳೂ, ೬ವೇದಾಂಗಗಳೂ, ೬ದರ್ಶನಗಳೂ, ಇತಿಹಾಸ, ಅರ್ಥಶಾಸ್ತ್ರ, ಕಾಮಶಾಸ್ತ್ರ, ಶಿಲ್ಪಶಾಸ್ತ್ರ ಮೂದಲಾದವು ಸೇರುತ್ತವೆ. ಸ್ಥಾಪಥ್ಯ ಮತ್ತು ಶಿಲ್ಪಶಾಸ್ತ್ರಗಳು ಅಥರ್ವ ವೇದಕ್ಕೆ ಉಪವೇದ ಎಂದು ಎಣಿಕೆ. ಈ ೬೪ಕಲೆಗಳಲ್ಲಿ ಮೊದಲ ನಾಲ್ಕನ್ನು ಪಟ್ಟಿ ಮಾಡಿ ನಂತರ ಉಳಿದದ್ದನ್ನು ಹೇಳುವುದು ವಾಡಿಕೆ. ಗೀತ, ವಾದ್ಯ, ನೃತ್ಯ, ಅಲೇಖ್ಯ ಈ ನಾಲ್ಕಕ್ಕೆ ಸಮುದಾಯದ ಪ್ರಯೋಜನ ಸ್ಪಷ್ಟವಾಗಿದೆ. ಇಲ್ಲಿ ಶಿಲ್ಪವನ್ನು ಶಾಸ್ತ್ರದವಿಭಾಗಕ್ಕೆ ಸೇರಿಸಿ ಚಿತ್ರವನ್ನು ಕಲೆಯ ವಿಭಾಗಕ್ಕೆ ಸೇರಿಸಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಹೀಗಿದೆಯಂತೆ ವಜ್ರನೆಂಬ ಅರಸ ಮಾರ್ಕಾಂಡೇಯರಲ್ಲಿ ಶಿಲ್ಪ ಸೂತ್ರವನ್ನು ತಿಳಿಯಬಯಸುತ್ತಾನೆ. ಆಗ ಮಾರ್ಕಾಂಡೇಯರು ಚಿತ್ರಸೂತ್ರ ತಿಳಿಯದೆ ಶಿಲ್ಪಸೂತ್ರ ಅರಿವಿಗೆ ಬಾರದು, ಚಿತ್ರಸೂತ್ರಕ್ಕೆ ಮೊದಲು ನೃತ್ಯ ಗೊತ್ತಿರಬೇಕು, ನೃತ್ಯ ತಿಳಿಯಲು ವಾದ್ಯದ ಅರಿವಿರಬೇಕು, ವಾದ್ಯದ ತಿಳುವಳಿಕೆಯಾಗಲು ಹಾಡುಗಾರಿಕೆಯ ಹಿನ್ನೆಲೆ ಬೇಕು ಎಂದು ಹೇಳುತ್ತಾರೆ. ಈ ಮೂಲಕ ಚಿತ್ರ, ನೃತ್ಯ, ವಾದ್ಯ, ಗೀತಗಳ ಪರಸ್ಪರ ಸಂಭಂದವನ್ನು ಹೇಳುತ್ತಾರೆ. ಹಾಗಾಗಿ ಚಿತ್ರ ಮೊದಲು ಸೂತ್ರ ಆನಂತರ. ಚಿತ್ರಕಾರ ಹಿಡಿದ ದಾರಿಯನ್ನೇ ಶಾಸ್ತ್ರಜ್ನ ಹಿಡಿಯಬೇಕಾದುದು. ಹಿರಿಯ ಪ್ರಯೋಗಗಳನ್ನು ನೋಡಿ, ಅನುಭವಿಸಿ ಅವುಗಳ ಸ್ವಾರಸ್ಯವನ್ನು ಭಟ್ಟಿ ಇಳಿಸಿದಾಗಲೇ ಶಾಸ್ತ್ರ ಸಿದ್ದವಾಗುವುದು. ಆದರೆ ಪ್ರಯೋಗಗಳು ಜನರ ಕಣ್ಣೆದುರು ಇರದಿದ್ದಾಗ ಶಾಸ್ತ್ರದ ಒಕ್ಕಣೆ ಕೈ ದೀವಿಗೆಯಾಗುತ್ತದೆ.ಇರುವ ಪದಾರ್ಥಗಳ ಸ್ವರೂಪ ತಿಳಿಯುವದು ಶಾಸ್ತ್ರ, ಹೊಸದನ್ನು ಸೃಷ್ಟಿ ಮಾದುವುದು ಕಲೆ ಎಂದು ಸ್ತೂಲವಾಗಿ ಹೇಳಬಹುದು.ಅಭ್ಯಾಸ ಪ್ರದಾನವಾದದ್ದುವಿದ್ಯೆ 'ಅಭ್ಯಾಸಾನುಸಾರಿಣಿ ವಿದ್ಯಾ'ಪ್ರತಿಭಾ ಪ್ರದಾನವಾದದ್ದು ಕಲೆ.ಈ ೬೪ ಕಲೆಗಳಲ್ಲಿ ಲಲಿತಕಲೆ, ವಿಜ್ನಾನ, ಕುಶಲಕಲೆ ಎಲ್ಲವೂ ಸೇರಿದೆ. ಕಲೆಯಲ್ಲಿ ಭಾವಪ್ರಧಾನವಾದಾಗ ಲಲಿತಕಲೆಯೆಂದೂ, ಪದಾರ್ಥ ಪ್ರಧಾನವಾದಾಗ ಕುಶಲಕಲೆಯೆಂದೂ ಕರೆಯಬಹುದೇನೋ.ವ್ಯಂಜನಾಕ್ಷರಗಳಲ್ಲಿ ಮೊದಲನೆಯದಾದ ಕ ಕಾರಕ್ಕೆ ಕಡೆಯದಾದ ಲ ಕಾರವೂ ಸೇರಿ ಕಲೆಯಾಯ್ತು ಎನ್ನುವವರೂ ಇದ್ದಾರೆ. ಅಂದರೆ ಎಲ್ಲವನ್ನೂ ಒಳಗೊಂಡು ಎಂಬ ಅರ್ಥದಲ್ಲಿ. ಚಿತ್ರ'ಕಲಾನಾಂ ಪ್ರವರಂ ಚಿತ್ರಂ ಧರ್ಮಕಾಮಾರ್ಥ ಮೋಕ್ಷದಂ'ಎನ್ನುವ ಮಾತನ್ನು ಗಮನಿಸಿದರೆ ಕಲಾಪ್ರಕಾರಗಳ ಮೋಕ್ಷದೆಡೆಗಿನ ದೃಷ್ಟಿ ಸ್ಪಷ್ಟವಾಗುತ್ತದೆ.ವಿಷ್ಣುಧರ್ಮೋತ್ತರದ ಮಾತು.ರೂಪಭೇದ ಪ್ರಮಾಣಾನಿ ಭಾವ ಲಾವಣ್ಯ ಯೋಜನಂಸಾದೃಶ್ಯಂ ವರ್ಣಿಕಾಭಂಗಂ ಇತಿ ಚಿತ್ರ ಷಡಂಗಕಂರೂಪಭೇದವೇ ಮೊದಲಾದ ಆರು ಅಂಗಗಳಿಂದ ಕೂಡಿದ್ದ ಚಿತ್ರಕಲೆಯಲ್ಲಿ ನಾಲ್ಕು ಹಂತದ ರಚನಾ ಕ್ರಮಗಳು. ಧೌತ, ಘಟ್ಟಿತ, ಲಾಂಛಿತ, ರಂಜಿತಗಳೂ ಇಂದಿಗೂ ಅನುಕರಣೆಯಲ್ಲಿದೆ. ಮನೆಯನ್ನು ಶೃಂಗಾರ, ಶಾಂತ, ಹಾಸ್ಯ ರಸಗಳಿಂದ ಕೂಡಿದ ಚಿತ್ರದಿಂದ ಅಲಂಕರಿಸುತ್ತಿದ್ದರೆ, ದೇವಾಲಯ, ಸಭಾಂಗಣವನ್ನು ನವರಸದಿಂದಕೂಡಿದ ಚಿತ್ರ ಇರುತ್ತಿತ್ತು. ಚಿತ್ರಕಲೆಯನ್ನು ಕುರಿತಂತೆ ಸೋಮೇಶ್ವರನ ಅಭಿಲಷಿತಾರ್ತಚಿಂತಾಮಣಿ(ಮಾನಸೋಲ್ಲಾಸ)೧೨ ಶತಮಾನ, ವಿಷ್ಣುಧರ್ಮೋತ್ತರ ೫ನೇ ಶತಮಾನ, ಮಾರ್ಕಾಂಡೇಯ ಪುರಾಣ, ಶುಕ್ರನೀತಿ, ವಿದ್ಯಾರಣ್ಯರ ಪಂಚದಶಿಯೇ ಮೊದಲಾದ ಗ್ರಂಥಗಳಲ್ಲಿ ಸಾಕಷ್ಟು ವಿವರಣೆ ಸಿಗುತ್ತದೆ. ಈ ಕಾಲದಲ್ಲಿ ಕಾಗದದ ಬಳಕೆ ಕಂಡುಬರುವದಿಲ್ಲ. ಗೋಡೆ ಅಥವಾ ಬಟ್ಟೆಯಮೇಲೆ ಚಿತ್ರ ರಚನೆ ಮಾಡಲಾಗುತ್ತಿತ್ತು. ಪ್ರತಿಮಾ ನಾಟಕ, ಉತ್ತರ ರಾಮಚರಿತೆ, ಮುದ್ರಾ ರಾಕ್ಷಸ, ನಾಟಕಗಳಲ್ಲಿ ಅಪಾರವಾದ ಚಿತ್ರ ವರ್ಣನೆ ಕಾಣಸಿಗುತ್ತದೆ. ರಾಮಯಣ ಮಹಾಭಾರತ, ಅಭಿಜ್ನಾನ ಶಾಕುಂತಲ ಮುಂತಾದವುಗಳಲ್ಲಿ ಕೇವಲ ಚಿತ್ರದ ವರ್ಣನೆಯಲ್ಲದೆ ಚಿತ್ರಕಲೆಯ ಪಾರಿಭಾಷಿಕ ಶಬ್ಧಗಳೂ ಕಂಡುಬರುತ್ತವೆ. ಆ ಕಾಲದ ರಾಜ ಮಹಾರಾಜರುಗಳು ಚಿತ್ರದಂತೆ ಹಲವು ಕಲಾಪ್ರಕಾರಗಳಲ್ಲಿ ಪರಿಣತಿಯನ್ನೂ ಪಡೆದಿರುತ್ತಿದ್ದರು. ಉದಾ: ದುಶ್ಯಂತ ಶಕೂಂತಲೆಯ ಚಿತ್ರ ಬರೆದದ್ದು. ಚಿತ್ರಕ್ಕೂ ನೃತ್ಯಕ್ಕೂ ಅವಿನಾಭಾವ ಇತ್ತೆಂದು ತೋರುತ್ತದೆ. ಯಥಾ ವೃತ್ತೇ ತಥಾ ಚಿತ್ರಂ ಎಂಬ ಮಾತನ್ನು ಗಮನಿಸಬಹುದು.ಇಂದಿನ ಚಿತ್ರ ಶಿಲ್ಪಗಳನ್ನು ಗಮನಿಸಿದರೆ ಭಾರತೀಯ ಎನ್ನುವ ಅಂಶಗಳು ತುಂಬಾ ವಿರಳ. ಇದಕ್ಕೆ ಕಾರಣ ಹಲವಿರಬಹುದು. ಆದರೆ ಭಾರತೀಯತೆ ಎನ್ನುವುದು ವೈವಿದ್ಯದಲ್ಲೇ ಅಲ್ಲವೇ ಇರುವುದು. ನಮ್ಮ ಚಿತ್ರ ಶೈಲಿಗಳನ್ನೇ ನೋಡಿ ಮೈಸೂರು, ತಂಜಾವೂರು, ಗಂಜೀಫ಼ಾ, ಮಧುಬನಿ, ಕಾಂಗ್ರಾ, ಗುಲೇರ್ ಎಲ್ಲವೂ ಇಂದು ತುಂಬಾ ವಿರಳವಾಗುತ್ತಿವೆ. ಕಲಾವಂತಿಕೆಯನ್ನು ಮೀರಿ ಮಾರಾಟ ಸರಕಾಗಿ ಮಾರ್ಪಡುತ್ತಿದೆ. ಪ್ರಾದೇಶಿಕತೆ ಮರೆಯಾಗಿದೆ. ಇಂದು ಭಾರತದ ಅನೇಕ ಕಲೆಗಳು ಉದ್ಯೋಗದ ರೂಪದಲ್ಲಿ ಉಳಿದಿದೆ. ಕಲೆ ವೈವಿದ್ಯತೆ ಕಳೆದುಕೊಳ್ಳುತ್ತಾ ಇದೆ. ಭಾರತದಲ್ಲಿ ವಿದ್ಯೆ ಅನ್ನ ಆಹಾರವನ್ನೂ ಯಾವತ್ತೂ ಮಾರಟ ಮಾಡುವಂತದ್ದಾಗಿರಲಿಲ್ಲ. ಆದರೆ ದುರಂತವೆಂದರೆ ಇಂದು ಅವೆರಡು ಬಹು ದೊಡ್ಡ ಉದ್ಯಮವಾಗಿ ಬೆಳೆದಿದೆ. ಅದಕ್ಕಾಗಿ ಕಲೆ ಕಳೆ ಕಳೆದುಕೊಂಡಿದೆ. ಶಿಲ್ಪಶಿಲ್ಪ ಎಂದರೆ ಶೀಲ ಸಮಾಧೌ ಎಂಬ ಮೂಲದಿಂದ ಹೊಮ್ಮಿದ್ದು ಎಂದರ್ಥ, ಸಮಾಧಿ ಶಿಲ್ಪದಲ್ಲಿ ಮುಖ್ಯವಾದ ವಿವರ ಸಮಾಧಿ ಎಂದರೆ ಚಿತ್ತದ ಏಕಾಗ್ರತೆ. ಒಂದೊಂದು ಶಿಲ್ಪವನ್ನು ಮಾಡುವಾಗಲೂ ಶಿಲ್ಪಿ ಸಂಸ್ಕಾರಗೊಳ್ಳುತ್ತಾನೆ.ಎತೈರ್ಯಜಮಾನ ಆತ್ಮಾನಂ ಸಂಸ್ಕುರುತೆ- ಐತರೇಯ ಬ್ರಾಹ್ಮಣಇದು ಸಮಾಧಿ ದೃಷ್ಟಿಯಫ಼ಲ.ಭಾವ ಕಲ್ಪನತಯಾ ಸ್ವಬುದ್ದ್ಯಾಕರಯೇತ್- ವಿಷ್ಣುಧರ್ಮೋತ್ತರಕೇವಲ ತಾಲ ಮಾನಾದಿ ಪ್ರಮಾಣದಿಂದ ಶಿಲ್ಪವಾಗುವುದಿಲ್ಲ. ಭಾವ ಕೌಶಲ ಬುದ್ದಿಪ್ರೌಢಿಮೆಗಳಿರದೆ ಶಿಲ್ಪಿಯಶಸ್ವಿಯಾಗಲಾರ.ನಾನಾವಿಧಾನಂ ವಸ್ತೂನಾಂ ಯಂತ್ರಾಣಂ ಕಲ್ಪಸಂಪದಾಮ್ಧಾತೂನಾಂ ಸಾಧನಾನಾಂ ಚ ವಾಸ್ತೂನಾಂ ಶಿಲ್ಪಸಚಿಜ್ನಿತಂನಾನಾಪ್ರಕಾರದ ವಸ್ತುಗಳು, ಯಂತ್ರಗಳು, ಯುಕ್ತಿ, ಪ್ರಯುಕ್ತಿಗಳು, ಧಾತು, ಸಾಧನ, ಕ್ರತ್ರಿಮ ಪದಾರ್ಥ ಮತ್ತು ಮಂದಿರವೇ ಮೊದಲಾದವುಗಳಿಗೆ ಶಿಲ್ಪವೆನ್ನುತ್ತಾರೆ. ಇದು ಭೃಗುವಿನ ಶಿಲ್ಪಲಕ್ಷಣದ ವಿವರ. ಇದರಲ್ಲಿ ಪ್ರಮುಖವಾಗಿ ೩ ಖಂಡ ಧಾತುಖಂಡ, ಸಾಧನ ಖಂಡ, ವಾಸ್ತು ಖಂಡ, ಈ ಮೂರು ಖಂಡಗಳಿಗೆ ಒಂಬತ್ತು ಉಪಶಾಸ್ತ್ರಗಳು, ೩೧ ವಿದ್ಯೆಗಳು, ೬೪ ಕಲೆಗಳು ಸೇರಿಕೊಳ್ಳುತ್ತವೆ. ಭಾರತೀಯ ಪರಂಪರೆಯ ಹಿನ್ನೆಲೆಯಲ್ಲಿ ನಾರಾಯಣಮುನಿ ಮತ್ತು ಅವರ ಶಿಷ್ಯ ಅಚ್ಯುತವಿಶ್ವಕರ್ಮನು ಚಿತ್ರ ಶಿಲ್ಪ ಮುಂತಾದ ಕಲೆಗಳ ಆದ್ಯ ಪ್ರವರ್ತಕ ಎಂದು ಭಾವಿಸಲಾಗಿದೆ. ಶಿಲ್ಪಶಾಸ್ತ್ರ ಕುರಿತಂತೆ ಎತತ್ ತಂತ್ರಾದಿ ಸಂಖ್ಯಾ ಲಕ್ಷದ್ವಾದಶಕಾ ಮತಾ. ಎನ್ನುವ ಮಾತಿದೆ. ೧೨ಲಕ್ಷ ಶ್ಲೋಕಗಳ ವ್ಯಾಪ್ತಿ ಎಂದರೆ ಅದರ ಅಸ್ತಿತ್ವ ಮಹತ್ವ ವೇದ್ಯ ತಾನೇ. ಶಿಲ್ಪದ ಕುರಿತಂತೆ ನಮಗೆ ಸಿಂಧು ಸಂಸ್ಸೃತಿಯಲ್ಲೆ ಪುರಾವೆ ಸಿಗುತ್ತವೆ. ನಂತರ ಹತ್ತು ಹಲವು ಶೈಲಿಯಾಗಿ, ಪ್ರಕಾರವಾಗಿ ಬೆಳೆದು ಭಾರತವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿವೆ. ಪಲ್ಲವ, ಚೋಳ, ಚಾಳುಕ್ಯ ಹೋಯ್ಸಳ, ನೋರಂಬ, ಚೇರ ಮುಂತಾದ ಶಿಲ್ಪ ಪದ್ದತಿಗಳಿಗೆ ಒಂದೊಂದಕ್ಕೂ ಒಂದೊಂದು ಶಾಸ್ತ್ರದ ಆಸರೆ. ಆದರೆ ಎಲ್ಲಾ ಶಾಸ್ತ್ರಗಳೂ ಸೂತ್ರಗಳೂ ದೇವಾಲಯದಲ್ಲಿ ಪೂಜಿಸಲ್ಪಡುವ ವಿಗ್ರಹಕ್ಕೆ ಮಾತ್ರ. ಉಳಿದವನ್ನು ಶಿಲ್ಪಿ ಯಥಾ ರುಚಿ ಮಾಡಲಿ ಎಂದು ಶಾಸ್ತ್ರಗ್ರಂಥಗಳೇ ಹೇಳಿವೆ. ನಾವು ದೇಶದಾದ್ಯಂತ ನೋಡುವ ಶಿಲ್ಪಗಳಲ್ಲಿ ಬೇರೆ ಬೇರೆ ತಾಲ ಮಾನದಲ್ಲಿ ಕೃತಿ ರಚಿಸಿದ್ದನ್ನು ಕಾಣುತ್ತೇವೆ. ಇದಕ್ಕೆ ಶೈಲಿ, ಮತ್ತು ಆಯಾ ಮಾದ್ಯಮಗಳೂ ಕಾರಣವಾಗುತ್ತವೆಹೀಗೆ ಮಾದ್ಯಮಗಳೂ ಕೂಡಾ ಕಲಾ ಸೃಷ್ಟಿಯಲ್ಲಿ ಪ್ರಮುಖವಾದ ಪಾತ್ರವನ್ನೇ ವಹಿಸುತ್ತವೆ. ಭಾರತೀಯ ಚಿತ್ರಕಲೆಗಳು ಬಹುತೇಕ ನಶಿಸಿ ಹೋಗಿರಲು ಕಾರಣ ಇದೂ ಇರಬಹುದು.ಅದನ್ನು ಬಹುಕಾಲ ಸಂರಕ್ಷಿಸಿಕೊಳ್ಳುವದು ದುಸ್ತರವಾಗಿತ್ತು. ಆದರೆ ಸಾಹಿತ್ಯ ಕೃತಿಗಳು ಆ ಕೊರತೆಯನ್ನು ತುಂಬಿ, ಚಿತ್ರ ಶಿಲ್ಪಗಳ ವಿಸ್ತಾರವನ್ನೂ, ಜನಪ್ರಿಯತೆಯನ್ನೂ, ಮಹತ್ವವನ್ನೂ, ಅಕ್ಷರ ಚಿತ್ರ, ಶಬ್ದ ಶಿಲ್ಪದ ರೂಪದಲ್ಲಿ ದಾಖಲಿಸಿವೆ. ನಮ್ಮ ದೇಶದಲ್ಲಿ ಸಾಹಿತ್ಯ, ಕಾವ್ಯ ಕ್ಷೇತ್ರಗಳಲ್ಲಿ ನಡೆದಂತೆ ಚಿತ್ರ ಶಿಲ್ಪದ ಬಗ್ಗೆ ವಿಮರ್ಶೆ ನಡೆದಿಲ್ಲ. ಯಾಕೆಂದರೆ ಖಂಡನ - ಮಂಡನ ಕಲಾಕೃತಿ ಕಂಡುಬಂದಿಲ್ಲ. ಹಾಗಂತ ಪರಂಪರೆಯನ್ನು ವಿರೋಧಿಸುತ್ತಲೆ ಹೊಸತನ ಬೆಳೆಯುತ್ತಿರುವ ಪರಿಯನ್ನು ನೋಡುತ್ತಿದ್ದೇವೆ. ಇವತ್ತಿನ ಕಲಾಜಗತ್ತು ರಸ ಧ್ವನಿ ಆನಂದ ಔಚಿತ್ಯದ ಕುರಿತು ಮಾತನಾಡುವದಿರಲಿ, ಆ ಕುರಿತು ಆಸಕ್ತಿ ಇರುವವನನ್ನು ಲೇವಡಿ ಮಾಡುವ ಮಟ್ಟಕ್ಕೆ ಬಂದಿದೆ.ಆದರೆ ಒಟ್ಟು ಕಲೆಯ ಉದ್ದೇಶ ರಸಾನಂದವೂ, ಚಿತ್ತವಿಶ್ರಾಂತಿಯೊ ಅಲ್ಲವೇ? ಶಾಸ್ತ್ರವಿರೋಧಿಗಳ ಕಲಾಕೃತಿಯಿಂದ ಕೂಡಾ ರಸಿಕ ಬಯಸುವದು ಅದನ್ನೇ ಅಲ್ಲವೇ. ಅಷ್ಟಕ್ಕೂ ಭಾರತೀಯ ಪರಂಪರೆ, ಇತಿಹಾಸದ ಕುರಿತು ಅರಿವಿದ್ದೂ ಪಾಶ್ಚಾತ್ಯರ ಅನುಕರಣೆ ಅದಾವ ಆನಂದವನ್ನು ತಂದೀತೋ?(ಭಾರತೀಯ ಕಲಾವಿದರು ಇತರ ದೇಶಗಳಿಗೆ ಹೋದಾಗ ಅಲ್ಲಿಯ ಜನ ಭಾರತೀ ಕಲೆಯನ್ನು ತನ್ನಿ ಇದೆಲ್ಲ ನಮ್ಮ ಅನುಕರಣೆ ಎನ್ನುತ್ತಾರಂತೆ)ಚಿತ್ರ - ಶಿಲ್ಪ ಕಲಾವಿದರಿಗೆ ಮಿಕ್ಕೆಲ್ಲ ಕಲಾವಿದರಿಗಿಂತ ಒಂದು ಅನುಕೂಲವಿದೆ. ಕಲಾವಿದ ಮತ್ತು ರಸಿಕ (ಸಹೃದಯ)ನಡುವೆ ಮಿಕ್ಕ ಕಲೆಯಂತೆ ಪೊಷಕ ಸಾಮಗ್ರಿ, ಅಥವಾ ಪೊಷಕ ಕಲಾವಿದರು ಇರುವದಿಲ್ಲ. ಸ್ವತಂತ್ರವಾಗಿ ಕೃತಿ ರಚಿಸಬಹುದು. ಉಳಿದ ಕಲೆಗಳು ಹಾಗಲ್ಲ. ( ಯಕ್ಷಗಾನ, ನೃತ್ಯ, ಸಂಗೀತ, ನಾಟಕ ಮುಂತಾಗಿ..) ಇಲ್ಲಿ ಚಿತ್ರ ಶಿಲ್ಪ ಕಲಾವಿದರು ಬಹಳ ಸ್ವತಂತ್ರರು. ತಮ್ಮ ಕಲಾ ಪರಿಣಾಮಕ್ಕೆ ತಾವೇ ನೇರ ಜವಾಬ್ಧಾರರು. ಇದು ಹೆಚ್ಚುಗಾರಿಕೆಯಾದರೆ ಕೊರತೆಯೂ ಇದೆ. ನೃತ್ಯ, ಸಂಗೀತಾದಿಗಳನ್ನು ಜನ ಹೆಚ್ಚು ಸಮಯ ಕೊಟ್ಟು ಸವಿಯುತ್ತಾರೆ. ಆದರೆ ನಮ್ಮ ಚಿತ್ರ ಶಿಲ್ಪಗಳಿಗೆ ಹಾಗಿಲ್ಲ, ಅದರ ನಿರ್ಮಾಣ ಹಂತದಲ್ಲಿ ನೋಡುಗರೇ ಇಲ್ಲ. ಅದು ಒಮ್ಮೆ ಸಿದ್ದವಾದ ಮೇಲೆಯೇ ನೋಡುವುದು ಅಲ್ಲಿಯೂ ಕೂಡಾ ಹೆಚ್ಚು ಸಮಯವನ್ನು ವ್ಯಯಿಸಲಾರರು. ಈ ಸ್ಥಿತಿ ಎಲ್ಲ ಕಾಲಕ್ಕೂ ಹೀಗೆಯೆ. ಅದು ಗ್ಯಾಲರಿಲ್ಲಿನ ಕಲಾಕೃತಿಯಿರಲಿ, ದೇವಾಲಯದ ಭಿತ್ತಿಯ ಶಿಲ್ಪವಿರಲಿ ಒಂದು ನೋಟ ಅತ್ತ ಕಡೆ ಬೀರುತ್ತಾರೆ ಅಷ್ಟೆ. ಅದು ಅಷ್ಟು ಆಕರ್ಶಕವಾಗಿದ್ದರೆ ಒಂದೆರಡು ನಿಮಿಷ ಮಾತ್ರ ಕೊಡುತ್ತಾರೆ. ಸರಿ ಈ ಒಂದೆರಡು ನಿಮಿಷದಲ್ಲೇ ಅದು ರಸಾನಂದವನ್ನೋ, ಚಿತ್ತವಿಶ್ರಾಂತಿಯನ್ನೋ ಕೊಡಬಲ್ಲದು. ಇಂದಿನ ವೇಗದ ಯುಗಕ್ಕೆ ಚಿತ್ರ ಶಿಲ್ಪಗಳು ಉತ್ತಮ ಪರಿಹಾರ ಕೂಡಾ ಆಗಬಹುದು.( ಉದಾ; ಗಾಯನ, ವಾದನ ನರ್ತನ ಗಳಿಗೆ ಕೊಡುವ ಸ್ವಲ್ಪ ಸಮಯವನ್ನೇ ಕೊಟ್ಟರು ಸಾಕು) ರಸಿಕರಿಗೆ ಆನಂದ ಚಿತ್ತ ವಿಶಾಂತಿ ಬಹು ಬೇಗ ಲಭಿಸಿಬಿಡುತ್ತದೆ. ಬಹುತೇಕ ಪ್ರಾದೇಶಿಕ ವಿಶೇಷಗಳಿಂದ ತುಂಬಿದ ಕಲಾಶೈಲಿಗಳು ಒಂದು ಶಾಸ್ತ್ರದ ಚೌಕಟ್ಟಿಗೆ ಒಳಪಟ್ಟಿದ್ದು ಗಮನಾರ್ಹ ಅಂಶ. ಎಲ್ಲಾ ದೇಶಿಗಳೂ ಮಾರ್ಗವಾಗಿದ್ದು, ಸಂವಹನ ಸಂಪರ್ಕ ದುಸ್ತರವಿದ್ದ ಆ ದಿನಗಳಲ್ಲಿ ಒಂದು ಶಾಸ್ತ್ರಕ್ಕೆ ತತ್ವಕ್ಕೆ ಬಂದದ್ದು ವಿಸ್ಮಯ ಉಂಟುಮಾತ್ತವೆ. ದೇಶಿಗಳೂ ಮಾರ್ಗಿಯಾಗುತ್ತಾ, ಮಾರ್ಗಿಯಿಂದ ದೇಶಿಯಾಗುತ್ತಾ ಸಾಗುವುದನ್ನು ನೋಡುತ್ತಿದ್ದೇವೆ. ಕಲಾವಿದ ತನ್ನ ಅನುಭವವನ್ನು ಯಾವುದೇ ಕಲಾಮಾದ್ಯಮದ ಮೂಲಕ ಅಭಿವ್ಯಕ್ತಿ ಗೊಳಿಸುವಾಗಲೂ ಔಚಿತ್ಯ ಪ್ರಜ್ನೆಯೂ ಮುಖ್ಯವಾಗುತ್ತದೆ. ಅದರ ಹದದ ಮೇಲೆಯೇ ಪರಿಣಾಮ ಕೂಡಾ ಭಿನ್ನವಾಗುತ್ತದೆ.ರೀತಿರಾತ್ಮಾ ಕಾವ್ಯಸ್ಯ್, ವಿಭಾವಾನುಭಾವ ವ್ಯಭಿಚಾರಿ ಸಂಯೋಗಾತ್ ರಸ ನಿಶ್ಪತ್ತಿಃ, ಕಾವ್ಯ ಶೋಭಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೆ, ಇಲ್ಲೆಲ್ಲ ಕಾವ್ಯದ ಜಾಗದಲ್ಲಿ ಚಿತ್ರವಿದ್ದರೂ ಅದಕ್ಕೂ ಇವೆಲ್ಲ ಸಂದೀತು. ಚಿತ್ರಕ್ಕೂ ಒಂದು ರೀತಿ, ಗುಣ, ಅಲಂಕಾರ, ಔಚಿತ್ಯ, ಧ್ವನಿ ಎಲ್ಲವೂ ಅನಿವಾರ್ಯವೇ ಆಗಿದೆ. ಎಲ್ಲಾ ವ್ಯಭಿಚಾರಿ ಭಾವಗಳೂ ಕೂಡಾ ಚಿತ್ರಕ್ಕೆ ಒದಗಿ ಬರುತ್ತವೆ. ಆದ್ದರಿಂದ ಎಲ್ಲಾ ರಸಗಳ ಅಭಿವ್ಯಕ್ತಿಗೆ ಚಿತ್ರಕಲೆಯಲ್ಲಿ ಸಾಧ್ಯತೆ ಇದೆ. ಅದರಲ್ಲೂ ರೇಖೆಗಳಿಗಿಂತ ಬಣ್ಣಗಳ ಸಾಮರ್ಥ್ಯ ಜಾಸ್ತಿ. ಭಾರತೀಯ ಕಲಾಕ್ಷೇತ್ರ ಈ ಎಲ್ಲ ಪ್ರಾಥಮಿಕ ಅಂಶಗಳಿಂದ ಕೂಡಾ ದೂರವಾಗುತ್ತಾ ಪಶ್ಚಿಮದ ಅನುಕರಣೆಯಲ್ಲಿ ತೋಡಗಿರುವುದು ವಿಪರ್ಯಾಸವೂ,ಖೇದಾಸ್ಪದವೂ ಆಗಿದೆ . ಇಂದಿನ ಕಲಾವಲಯಕ್ಕೆ ಶಾಸ್ತ್ರ ಸೂತ್ರ, ಮಾರ್ಗಕ್ಕಿಂತ ಮುಖ್ಯವಾಗಿರುದು ಪ್ರಸಿದ್ದಿ ಹಾಗೂ ಹಣ ಗಳಿಕೆ ಮಾತ್ರ ಎನ್ನಿಸುತ್ತಿದೆ. ಯಾಕೆಂದರೆಯವುದೇ ಕಲಾಪ್ರಕಾರ ನೋಡಿದರು ಅತ್ಯಂತ ಕಡಿಮೆ ಸಮಯದಲ್ಲಿ ಜನಪ್ರಿಯ ವಾಗಬೇಕು, ಮಾಡಿದ ಕೃತಿ mಚಿsಣeಡಿ ಠಿeಚಿಛಿe ಆಗಬೇಕೆಂಬ ಹೆಬ್ಬಯಕೆ ಎದ್ದು ಕಾಣುತ್ತಿದೆ. ಅದಕ್ಕೆ ಪೂರ್ವಾಗ್ರಹ ಇಲ್ಲದೆ ಕಲೆಯ ಮೌಲ್ಯ ವಿವೇಚನೆ ಮಾಡುವವರ ಸಂಖ್ಯೆ ಕೂಡಾ ವಿರಳವಾಗಿರುವುದು ಕಾರಣವಾಗಿರಬಹುದು. ವಿಮರ್ಶಾ ಕ್ಷೇತ್ರ ಬೇಸಿಗೆಯ ಬೇಗೆಗೆ ಕಂದುವ ಕೆರೆಯಾಗುತ್ತಿದೆ. ಕಲೆಗೆ ನಿಜವಾದ ಹೊಳಪೆಲ್ಲಿದೆ ಎನ್ನುವುದಕ್ಕೆ ಡಿ.ವಿ.ಜಿ.ಯವರ ಈ ಮಾತು ನಮಗೆ ನಿತ್ಯ ಗಾಯತ್ರಿಯಾಗುತ್ತದೆ.ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗುಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮಋಷಿವಾಕ್ಯದೊಡನೆ ವಿಜ್ನಾನ ಕಲೆ ಮೇಳೈವಿಸೆ ಜಸವು ಜನಜೀವನಕೆ - ಮಂಕುತಿಮ್ಮ
೨೧,೨೨ ರಂದು ಕುಮಟಾದಲ್ಲಿ ನೆಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಭಂದ .


- ರಾಘವೇಂದ್ರ ಹೆಗಡೆ.

Wednesday, April 8, 2009

ಯೋಚನೆ 'ತಲೆ'ಯಲ್ಲೇ ಇರುತ್ತಿದ್ದ ಕಾಲ


ಆಗೆಲ್ಲ ಯೋಚನೆ 'ತಲೆ'ಯಲ್ಲೇ ಇರುತ್ತಿದ್ದ ಕಾಲ, ತಲೆಯನ್ನು ಹಲವು ಮಾಧ್ಯಮದಲ್ಲಿ ಮಾಡಿದ್ದೇನೆ. ಇದು ಮಿಶ್ರ ಮಾಧ್ಯಮದ ಶಿಲ್ಪ. ಪ್ಲಾಸ್ಟರ್, ಅಕ್ರಿಲಿಕ್ ಬಳಸಿ ಮಾಡಿದ್ದು.
ಮನುಷ್ಯನ ಮುಖ ಭಾವದ ಅಭಿವ್ಯಕ್ತಿಗೆ ಪ್ರಯತ್ನ ,ತಲೆಗೆ ಬಲವಂತವಾಗಿ ಪಾರದರ್ಶಕವನ್ನು ತುರುಕಿದ್ದು.
ಹೀಗೆ ಎನೇನೊ ಮಾಡುತ್ತಿದ್ದೆ.

Saturday, April 4, 2009

ಮೌನಿ...

ಮೌನಿ...
ಮನುಷ್ಯ ಅಂತರ್ಮುಖಿಯಾದಾಗ ಬಹಿರಂಗದಲ್ಲಿ ಮೌನ ಮಾತ್ರ ಗೋಚರ...
ಅಂತರಂಗದಲ್ಲಿ..........?